ಶಶಿಕಲಾ ತಂಡವನ್ನು ಪಕ್ಷದಿಂದ ಉಚ್ಛಾಟಿಸಿ: ಸಂಧಾನಕ್ಕೆ ಪನ್ನೀರ್ ಸೆಲ್ವಂ ಬಣದ ಏಕೈಕ ಷರತ್ತು!

ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಮತ್ತು ಅವರ ತಂಡವನ್ನು ಉಚ್ಛಾಟನೆ ಮಾಡಿದರೆ ಮಾತ್ರ ಸಂಧಾನಕ್ಕೆ ಸಿದ್ಧ ಎಂದು ಮಾಜಿ ಸಿಎಂ ಒ ಪನ್ನೀರ್ ಸೆಲ್ವಂ ಬಣ ಹೇಳಿದೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಚೆನ್ನೈ: ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಮತ್ತು ಅವರ ತಂಡವನ್ನು ಉಚ್ಛಾಟನೆ ಮಾಡಿದರೆ ಮಾತ್ರ ಸಂಧಾನಕ್ಕೆ ಸಿದ್ಧ ಎಂದು ಮಾಜಿ ಸಿಎಂ ಒ ಪನ್ನೀರ್ ಸೆಲ್ವಂ ಬಣ ಹೇಳಿದೆ ಎಂದು ಹೇಳಲಾಗುತ್ತಿದೆ.

ಚೆನ್ನೈನಲ್ಲಿ ಕಳೆದ ರಾತ್ರಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ ಬಳಿಕ ಎಐಎಡಿಎಂಕೆ ಪಕ್ಷವನ್ನು ಮತ್ತೆ ಒಟ್ಟು ಗೂಡಿಸಲು ನಡೆಸಲಾಗುತ್ತಿರುವ ಸಂಧಾನ ಮಾತುಕತೆ ನಿರ್ಣಾಯಕ ಘಟ್ಟ ತಲುಪಿದ್ದು, ಇತ್ತ ಒ ಪನ್ನೀರ್ ಸೆಲ್ವಂ ಬಣದ  ಶಾಸಕರು ಸಂಧಾನಕ್ಕಾಗಿ ಏಕೈಕ ಷರತ್ತು ವಿಧಿಸಿದ್ದು, ಶಶಿಕಲಾ ಮತ್ತು ಅವರ ತಂಡವನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಭವಿಷ್ಯದಲ್ಲಿ ಎಂದಿಗೂ ಅವರನ್ನು ಪಕ್ಷದೊಳಗೆ ಬಿಟ್ಟುಕೊಳ್ಳದಿರುವ ಭರವಸೆ ನೀಡಿದರೆ ಮಾತ್ರ ತಾವು  ಸಂಧಾನಕ್ಕೆ ಸಿದ್ಧ ಎಂಬ ಷರತ್ತು ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.

ಪನ್ನೀರ್ ಸೆಲ್ವಂ ಬಣದೊಂದಿಗೆ ಸಂಧಾನ ಮಾತುಕತೆಗಾಗಿಯೇ ಸಿಎಂ ಪಳನಿ ಸ್ವಾಮಿ 9 ಮಂದಿಯ ಹಿರಿಯ ಮುಖಂಡರ ತಂಡವನ್ನು ರಚಿಸಲಾಗಿದ್ದು, ಈ ತಂಡದೊಂದಿಗಿನ ಮಾತುಕತೆ ವೇಳೆ ಪನ್ನೀರ್ ಸೆಲ್ವಂ ಬಣ  ಇಂತಹುದೊಂದು ಷರತ್ತು ವಿಧಿಸಿದೆ ಎಂದು ತಿಳಿದುಬಂದಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಮತ್ತು ತಮಿಳುನಾಡು ಸರ್ಕಾರದಲ್ಲಿ ಪ್ರಭಾವ ಹೊಂದಿರುವ ಶಶಿಕಲಾ ಅವರನ್ನು ಕೂಡಲೇ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿಸಬೇಕು. ಅಷ್ಟು ಮಾತ್ರವಲ್ಲದೇ ಅವರನ್ನು  ಮತ್ತು ಅವರ ತಂಡವನ್ನು ಪಕ್ಷದಿಂದ ಉಚ್ಠಾಟಿಸ ಬೇಕು ಎಂದು ಪನ್ನೀರ್ ಸೆಲ್ವಂ ಬಿಗಿ ಪಟ್ಟು ಹಿಡಿದಿದ್ದಾರೆ. ಸಂಧಾನಕ್ಕೂ ಮುನ್ನವೇ ಇದು ನಡೆಯಬೇಕಿದ್ದು, ಎಐಎಡಿಎಂಕೆಯಿಂದ ಶಶಿಕಲಾ ಬಣದ ಉಚ್ಠಾಟನೆ ಬಳಿಕವಷ್ಟೇ ತಾವು  ಸಂಧಾನ ಮಾತುಕತೆಗೆ ಬರುವುದಾಗಿ ಪನ್ನೀರ್ ಸೆಲ್ವಂ ಬಣ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com